You are currently viewing ಮುದಗಲ್ಲ :- ಗಣೇಶ ಹೋದ, ಜೋಕುಮಾರ ಬಂದ…

ಮುದಗಲ್ಲ :- ಗಣೇಶ ಹೋದ, ಜೋಕುಮಾರ ಬಂದ…

ಮುದಗಲ್ಲ ವರದಿ

ಗಣೇಶ ಹೋದ, ಜೋಕುಮಾರ ಬಂದ…

ಮುದಗಲ್ಲ :-ಗಣೇಶ ಚತುರ್ಥಿ ನಂತರದ 7ನೇ ದಿನವಾದ ರವಿವಾರ ದಿಂದ ಜೋಕು ಮಾರಸ್ವಾಮಿ ಆಚರಣೆ ಜೋರಾಗಿದ್ದು, ಜೋಕಪ್ಪ ಮಳೆ ತರಬಹುದೆಂಬ ಮಾತು ಶುರುವಾಗಿವೆ.

ಜೋಕುಮಾರ ಸ್ವಾಮಿ ಆಚರಣೆ ಜನಪದ ಹಿನ್ನೆಲೆ ಹೊಂದಿದ್ದು, ತಾಲೂಕಿನೆಲ್ಲೆಡೆ ನಡೆಯುತ್ತಿದೆ. ವಾರ ಕಾಲ ಜೋಕುಮಾರ ಸ್ವಾಮಿ ಹೊತ್ತ ಮಹಿಳೆಯರು ಎಲ್ಲ ಮನೆಗಳಿಗೆ ತೆರಳಿ ಜೋಕಪ್ಪ ಕುರಿತಾದ ಜನಪದ ಹಾಡು ಹಾಡುತ್ತಾರೆ. ಮನೆ ಮುಂದೆ ಬರುತ್ತಿದ್ದಂತೆ ಮನೆಯವರು ಮೂರ್ತಿಗೆ ಊದುಬತ್ತಿ ಬೆಳಗಿ, ದವಸ ಧಾನ್ಯಗಳನ್ನು ಅರ್ಪಿಸಿ ಅದಕ್ಕೆ ಪ್ರತಿಯಾಗಿ ಜೋಕಪ್ಪನ ಕಪ್ಪು ಪಡೆಯತ್ತಾರೆ. ಹೀಗೆ ಪಡೆದ ಕಪ್ಪನ್ನು ಮನೆಯಲ್ಲಿಟ್ಟು ಹುಣ್ಣಿಮೆ ನಂತರ ಅನ್ನ ಹಾಲಿನೊಂದಿಗೆ ಅದನ್ನು ಹೊಲದ ಸುತ್ತ ಹರಡುತ್ತಾರೆ. ಇದರಿಂದ ಭೂಮಿಯಲ್ಲಿ ಫಸಲು ಉತ್ತಮ ವಾಗಿ ಬೆಳೆಯುತ್ತದೆ ಎಂಬ ನಂಬಿಕೆ ಜನರದ್ದು.

ಬೇಗ ಮಳೆ ಬರಲಿ : ಜೇಡಿ ಮಣ್ಣಿನಿಂದ ಅಗಲವಾದ ಮುಖವನ್ನು ತಯಾರಿಸಿ, ಅದಕ್ಕೆ ಕಪ್ಪು ಬಣ್ಣ ಹಚ್ಚಿ, ಬೆಳ್ಳಿ ಕವಚದ ಹಣೆ ಪಟ್ಟಿ, ಕಣ್ಣು ಜೋಡಿಸಿ, ಅಗಲವಾದ ಪುಟ್ಟಿಯಲ್ಲಿ ಬೇವಿನ ಎಲೆಗಳ ಮಧ್ಯೆ ಕೂರಿಸಿಕೊಂಡು ಬಾರಿಕರ ಮನೆಯ ಮಹಿಳೆಯರು ಪುಟ್ಟಿ ಹೊತ್ತು ಸುತ್ತಾಡುತ್ತಾರೆ. ”ಬೇಗನೇ ಬೆಣ್ಣೆಯ ತನ್ನಿರವ್ವ… ಅಡ್ಡಡ್ಡ ಮಳೆ ಬಂದ್‌ ದೊಡ್ಡ ದೊಡ್ಡ ಕೆರೆಗಳೆಲ್ಲಾ ಒಡೆದಾವೂ…” ಎಂದು ಹತ್ತಾರು ಪದ ಕಟ್ಟಿ ಹಾಡುತ್ತಾರೆ. ಜೋಕಪ್ಪನ ಮೂರ್ತಿಯನ್ನು ಗಣೇಶನನ್ನು ಕಳಿಸುವ ರೀತಿಯಲ್ಲಿಯೇ ಬಾರಿಕರ ಮನೆಯಲ್ಲಿ ಪೂಜಿಸಿ ಬಾವಿಯಲ್ಲಿ ವಿಸರ್ಜಿಸುತ್ತಾರೆ.

ಸಮಾನ ಹಂಚಿಕೆ: ಜೋಕುಮಾರ ಸ್ವಾಮಿಯ ಜತೆ ಸುತ್ತಾಡಿ ಸಂಗ್ರಹಿಸಿದ ದವಸ ಧಾನ್ಯ, ದಕ್ಷಿಣೆಯನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳುತ್ತಾರೆ. ಭೂಮಿಯಲ್ಲಿ ಉಂಟಾದ ಮಳೆ ಅಭಾವ ಅರಿಯಲು ಶಿವನು ಕೆಲವರನ್ನು ಭೂ ಲೋಕಕ್ಕೆ ಕಳಿಸಿರುತ್ತಾನಂತೆ. ಅದರಲ್ಲಿ ಗಣೇಶ ಹಾಗೂ ಜೋಕಪ್ಪರು ಇದ್ದಾರೆ. ಗಣೇಶ ಹಬ್ಬದ ನಂತರ ಬರುವ ಜೋಕಪ್ಪ, ಎಲ್ಲ ಕಡೆ ಓಡಾಡಿ ಕೈಲಾಸಕ್ಕೆ ಹೋಗುತ್ತಾನೆ. ಎಷ್ಟೆಲ್ಲ ಸುತ್ತಾಡಿದರೂ ಸೇರು ಕಾಳು ಸಿಗಲಿಲ್ಲ. ಮಳೆ ಅಭಾವದಿಂದ ಜನರು ಕಂಗೆಟ್ಟಿದ್ದಾರೆ ಎಂದು ಹೇಳುತ್ತಾನಂತೆ. ಆಗ ಶಿವ ಭೂಮಿಗೆ ಮಳೆ ಸುರಿಸುತ್ತಾನೆ ಎಂದು ಜೋಕುಮಾರ ಸ್ವಾಮಿ ಆಚರಣೆ ಹಿನ್ನೆಲೆ ಅರಿತಿರುವ ಬಾರಿಕೇರ ಬಸವರಾಜಪ್ಪ ಹೇಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ದವಸ, ಧಾನ್ಯ ಕಡಿಮೆಯಾಗಿದ್ದರೂ ಪುರಾತನ ಆಚರಣೆ ಎಂಬ ಕಾರಣಕ್ಕೆ ಮುಂದುವರಿಸಿದ್ದಾರೆ.

ವರದಿ:-ಮಂಜುನಾಥ ಕುಂಬಾರ

 

Prajavikshane

Chandru R Bhanapaur

Leave a Reply

error: Content is protected !!