
ಬೆಂಗಳೂರು : ಮುಂಬರುವ ವರ್ಷ 2024ರಿಂದ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಶಾಲಾ ವಿದ್ಯಾರ್ಥಿಗಳ ಪಠ್ಯಪುಸ್ತಕವನ್ನು ಸಂಪೂರ್ಣ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದಲ್ಲಿ ನಿನ್ನೆ (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ” ಪ್ರಸ್ತುತವಾಗಿ ಪಠ್ಯದಲ್ಲಿನ ಆಕ್ಷೇಪಾರ್ಹ ಪದ, ವಾಕ್ಯಗಳನ್ನು ಬದಲಾವಣೆ ಮಾಡಲಾಗುತ್ತದೆ. ಈ ಮೂಲಕ ಮಕ್ಕಳಿಗೆ ಜಾತೀಯತೆಯಿಲ್ಲದೇ, ಎಲ್ಲರಿಗೂ ಸಮಾನ ಶಿಕ್ಷಣ ಸಹಬಾಳ್ವೆಯ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯ ವಾಕ್ಯದಲ್ಲಿ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ ಹೊಸದಾಗಿ ಪದಗಳನ್ನು ವಾಕ್ಯ, ಪ್ಯಾರಾಗಳನ್ನು ಸೇರಿಸಿದ್ದಾರೆ. ತಮಗೆ ಬೇಕಾದಂತೆ ಪಠ್ಯವನ್ನು ಸಿದ್ಧಪಡಿಸಿ ಮಕ್ಕಳಿಗೆ ನೀಡಿದ್ದಾರೆ. ಈಗಾಗಲೇ ಆಕ್ಷೇಪಾರ್ಹ ಅಂಶಗಳನ್ನು ಗುರುತಿಸಲಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಿದರು.
ಪ್ರಸ್ತುತವಾಗಿ ಈ ವರ್ಷ ಪಠ್ಯಪುಸ್ತಕ ಸಂಪೂರ್ಣ ಬದಲಾವಣೆ ಸಾಧ್ಯವಾಗಿಲ್ಲ. ಕೇವಲ ಒಂದು ಪಾಠವನ್ನು ಮಾತ್ರ ಬದಲಾವಣೆ ಮಾಡಲಾಗಿದ್ದು, 2024ರ ಮುಂದಿನ ಶೈಕ್ಷಣಿಕ ವರ್ಷಕ್ಕೂ ಮುನ್ನ ತಜ್ಞರ ಸಮಿತಿ ನೇಮಿಸಿ, ಪಠ್ಯಪುಸ್ತಕದಲ್ಲಿನ ಆಕ್ಷೇಪಾರ್ಹ ಅಂಶಗಳನ್ನೆಲ್ಲ ತೆಗೆದು ಹಾಕಲಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ವರದಿ : ಚಂದ್ರು ಆರ್ ಭಾನಾಪುರ್
(ವಿವಿಧ ಮೂಲಗಳಿಂದ ವಿಷಯ ಸಂಗ್ರಹ)