BIG NEWS : ‘ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಗೆ ತಪ್ಪು ಗ್ರಹಿಕೆ.!!’ : ಸಚಿವ ಹೆಚ್ ಕೆ ಪಾಟೀಲ್
ದಾವಣಗೆರೆ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಫೈನಾನ್ಸ್ ಕಂಪನಿಗಳ ಹಾವಳಿಯನ್ನು ತಡೆಗಟ್ಟುವ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ಹೊರಡಿಸಲು ಸಿದ್ದತೆ ನಡೆಸಿತ್ತು. ಆದರೆ, ಈ ಸರ್ಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ಹಲವು ಸ್ಪಷ್ಟನೆ ಕೇಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಾಪಸ್ ಕಳುಹಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮದೊಂದಿಗೆ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಸಚಿವ ಹೆಚ್ ಕೆ ಪಾಟೀಲ್, ‘ರಾಜ್ಯಪಾಲರು ಸುಗ್ರೀವಾಜ್ಞೆಯ ಪ್ರಸ್ತಾಪವನ್ನು ಒಪ್ಪಿಲ್ಲ. ರಾಜ್ಯಪಾಲ ಥಾವರ್ ಚಂದ ಗೆಹ್ಲೋಟ್ ಗೆ ತಪ್ಪು ಗ್ರಹಿಕೆ ಆಗಿರಬಹುದು.ಆಕ್ಷೇಪ ವ್ಯಕ್ತಪಡಿಸಿದ್ದನ್ನು ಸರಿಪಡಿಸಿ ಮತ್ತೆ ಮಂಡಿಸುತ್ತೇವೆ. ಸುಗ್ರೀವಾಜ್ಞೆ ಬಗ್ಗೆ ಅಧಿಕಾರಿಗಳೇ ಫೀಡ್ ಬ್ಯಾಕ್ ಕೊಟ್ಟಿದ್ದಾರೆ. ರಾಜ್ಯಪಾಲರಿಗೆ ಅಧಿಕಾರಿಗಳೇ ಫೀಡ್ ಬ್ಯಾಕ್ ಕೊಟ್ಟಿದ್ದು ನೋಡಿದ್ದೇನೆ ಆ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ’ ಎಂದರು.
ಇದರ ಜೊತೆಗೆ ದೆಹಲಿ ವಿಧಾನಸಭಾ ಚುನಾವಣೆಯ ವಿಚಾರದ ಕುರಿತು ಮಾತನಾಡಿದ ಅವರು, ಈ ಚುನಾವಣೆಯ ಫಲಿತಾಂಶದಲ್ಲಿ ಜನಾದೇಶಕ್ಕೆ ತಲೆಬಾಗುತ್ತೇನೆ. ದೆಹಲಿಯಲ್ಲಿ ಬಿಜೆಪಿಗೆ ಗೆಲುವಾಗಿದೆ. ಆಪ್ ಮತ್ತು ನಾವು ಸೋತಿದ್ದೇವೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಬಗ್ಗೆ ವಿಶ್ಲೇಷಣೆ ಆಗಿದೆ. ದೆಹಲಿ ಚುನಾವಣೆಯ ಕುರಿತು ವಿಶ್ಲೇಷಣೆ ಆಗಬೇಕಿದೆ. ಚುನಾವಣೆ ನೀತಿ ಹಾಗೂ ಅಧಿಕಾರಿಗಳ ವರ್ತನೆ ಪ್ರಶ್ನಾರ್ಥಕವಾಗಿದೆ. ಈ ಕುರಿತು ವಿಶ್ಲೇಷಣೆ ಆಗಬೇಕಿದೆ. ಆಪ್, ಕಾಂಗ್ರೆಸ್ ಒಂದಾಗದೇ ಇರುವುದು ಸಹ ಸೋಲಿಗೆ ಒಂದು ಕಾರಣವಾಗಿದೆ ಎಂದು ಹೇಳಿದರು.