LOCAL BREAKING : ಯಲಬುರ್ಗಾ ಪಟ್ಟಣದಲ್ಲಿ ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 3.40 ಲಕ್ಷ ಹಣ ಎಗರಿಸಿದ ಖದೀಮರು..!!
ಯಲಬುರ್ಗಾ : ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 3.40 ಲಕ್ಷ ಹಣ ಎಗರಿಸಿ ಕಳ್ಳರು ಪರಾರಿಯಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ ನಡೆದಿದೆ. ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಬಸವರಾಜ ಲಮಾಣಿ ಹಣ ಕಳೆದುಕೊಂಡವರು. ವಿಪರ್ಯಾಸ ಎಂದರೆ ಕೇವಲ 500 ಮೀಟರ್ ದೂರದಲ್ಲಿ ಯಲಬುರ್ಗಾ ಪೊಲೀಸ್ ಠಾಣೆ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಇದೆ.
ನಿನ್ನೆ (ಜೂನ್ 12ರಂದು) ಸುಮಾರು ಸಂಜೆ 4:30ಕ್ಕೆ ಪಟ್ಟಣದ ಜೇಸ್ಕಾಂ ಆವರಣದಲ್ಲಿ ತಮ್ಮ ಕಾರು ನಿಲ್ಲಿಸಿ ಎಸ್ಬಿಐ ಬ್ಯಾಂಕ್ಗೆ ಕೆಲಸದ ನಿಮಿತ್ತ ಹೋಗಿದ್ದರು. ಕಾರಿನಲ್ಲಿ ಹಣವಿಟ್ಟಿದ್ದನ್ನು ಗಮನಿಸಿದ ಖತರ್ನಾಕ್ ಕಳ್ಳರು ಕಾರಿನ ಗಾಜು ಒಡೆದು ಹಣ ದೋಚಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.
ಬಸವರಾಜ ಲಮಾಣಿ ಕೆಇಬಿಯ ಗುತ್ತಿಗೆದಾರನಾಗಿ ಕೇಲಸ ಮಾಡುತ್ತಿದ್ದರು. ಯಲಬುರ್ಗಾ SBI ಎಸ್ಬಿಐ ಶಾಖೆಯಲ್ಲಿ ತಮಗೆ ಬಂದ ಚಕ್ಅನ್ನು ಜಮಾಮಾಡುವುದಕ್ಕಾಗಿ ಕಲೆಕ್ಷನ್ಗೆ ಹಾಕಿ, ಬಳಿಕ ಆ ಹಣವನ್ನು ಹಿಂಪಡೆದು ಜೇಸ್ಕಾಂ ಆಫೀಸ್ ಬಳಿ ಕಾರ್ ಪಾರ್ಕ್ ಮಾಡಿ ಬಂದಿದ್ದರು ಎನ್ನಲಾಗಿದೆ.
ಈ ಪ್ರಕರಣ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಬಸವರಾಜ ಅವರನ್ನು ಹಿಂಬಾಲಿಸಿದ ಅನುಮಾಸ್ಪದ ವ್ಯಕ್ತಿಗಳ ಹುಡುಕಾಟಕ್ಕೆ ಪೊಲೀಸರು ಸಜ್ಜಾಗಿದ್ದಾರೆ. ಇವರನ್ನು ಹಿಂಬಾಲಿಸಿರುವ ಅನುಮಾಸ್ಪದ ವ್ಯಕ್ತಿಗಳ ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.
ಹಣ ಕಳೆದುಕೊಂಡ ಬಸವರಾಜ ಮಾತನಾಡಿ, “ನಾನು ಕಾರು ನಿಲ್ಲಿಸಿ ಸ್ವಲ್ಪ ಕೆಲಸ ಇದೆ ಎಂದು ಬ್ಯಾಂಕ್ಗೆ ಹೋಗಿದ್ದೆ. ಬ್ಯಾಂಕ್ನಿಂದ ಹಿಂತಿರುಗಿ ಬರುವಷ್ಟರಲ್ಲಿ ಕಾರಿನಲ್ಲಿದ್ದ 3.40 ಲಕ್ಷ ಹಣ ಕಳವಾಗಿದೆ. ಎಲ್ಲಾ ಕಡೆ ಹುಡುಕಾಡಿದೆ ಈ ಬಗ್ಗೆ ಸುಳಿವು ಸಿಗಲಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಕಳ್ಳರು ಕಾರಿನ ಗಾಜು ಒಡೆದು ಈ ಕೃತ್ಯ ಎಸಗಿದ್ದಾರೆ” ಎಂದು ನೋವಿನಿಂದ ಹೇಳಿದರು.