BIG NEWS : ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಮೃತ : ವೈದ್ಯರ ನಿರ್ಲಕ್ಷ ಆರೋಪ!
ಕೊಪ್ಪಳ : ಸಂತಾನಹರಣ ಶಸ್ತ್ರಚಿಕಿತ್ಸೆ ಮಹಿಳೆಯೊಬ್ಬರಿಗೆ ಉಸಿರಾಟ ಹಾಗೂ ಹೃದಯ ಸಮಸ್ಯೆ ಕಾಣಿಸಿಕೊಂಡು ಮೃತಪಟ್ಟ ಘಟನೆ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಮಲ್ಲಮ್ಮ ಕಲ್ಲೂರ್ (23) ಸಾವನ್ನಪ್ಪಿದ ದುರ್ದೈವೆ ಎಂದು ಗುರುತಿಸಲಾಗಿದ್ದು, ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಈ ಘಟನೆ ನಡೆದಿದ್ದು, ಅನಸ್ತೇಶಿಯ ನೀಡದೆ ವೈದ್ಯರು ಚಿಕಿತ್ಸೆ ನಡೆಸಿದ್ದಾರೆ. ಇದರಿಂದ ಮಲ್ಲಮ್ಮ ಮೃತಪಟ್ಟಿದ್ದಾಗಿ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಯ ಹಿನ್ನೆಲೆ :-
ಸಂತಾನಹರಣ ಚಿಕಿತ್ಸೆಗೆಂದು ಸೋಮವಾರ ಆಸ್ಪತ್ರೆಗೆ ಮಲ್ಲಮ್ಮ ದಾಖಲಾಗಿದ್ದಾರೆ. ಮಂಗಳವಾರ ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮಲ್ಲಮ್ಮ ಅವರ ಸ್ಥಿತಿ ಗಂಭೀರವಾಗಿದೆ. ಸ್ಥಿತಿ ಗಂಭೀರವಾಗುತ್ತಲೇ ಆರೋಗ್ಯ ಕೇಂದ್ರದ ವೈದ್ಯರು ಜಿಲ್ಲಾ ಆಸ್ಪತ್ರೆಗೆ ಮಹಿಳೆಯನ್ನು ರವಾನಿಸಿದ್ದಾರೆ. ಆದರೆ ಮಾರ್ಗಮಧ್ಯ ದಲ್ಲಿಯೇ ಮಲ್ಲಮ್ಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮಲ್ಲಮ್ಮ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು,
ಆಸ್ಪತ್ರೆಗೆ ಬಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜ ಮತ್ತು ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ ಡಾ.ಈಶ್ವರ ಸವಡಿ ಅವರನ್ನು ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಪ್ರಜಾ ವೀಕ್ಷಣೆ ಮಾಧ್ಯಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದು ವೈದ್ಯರ ನಿಲಕ್ಷದಿಂದ ಮಹಿಳೆಯ ಸಾವು ಸಂಭವಿಸಿದ್ದು ಎಂದು ಕುಟುಂಬಸ್ಥರು ಆರೋಪಿಸಿದ್ದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ವರದಿಯ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಮೃತ ಮಹಿಳೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವ ಕಾರ್ಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.