“ಕೊಪ್ಪಳ | ಸರ್ಕಾರಿ ಶಾಲೆಗಳ ಅಭಿವೃದ್ಧಿ ಗೆ ಸಿಎಸ್ಆರ್ ಹಣ ಬಳಕೆಗೆ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಖಂಡನೆ”
ಪ್ರಜಾ ವೀಕ್ಷಣೆ ಡೆಸ್ಕ್ ನ್ಯೂಸ್ :
ಕೊಪ್ಪಳ : ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಸ್ಥಾಪನೆಗೆ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ಬಳಸಲಾಗುವುದು ಎಂದು ಹೇಳಿರುವ ರಾಜ್ಯದ ಉಪ ಮುಖ್ಯಮಂತ್ರಿ ಡಿ. ಕೆ. ಶಿವ ಕುಮಾರ ಅವರ ಹೇಳಿಕೆಗೆ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ( ಎಐಡಿಎಸ್ಒ) ವಿದ್ಯಾರ್ಥಿ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಅವರು, ರಾಜ್ಯದ ಸರಕಾರಿ ಶಾಲೆಗಳ ಪರಿಸ್ಥಿತಿ ಅತ್ಯಂತ ದಯನೀಯವಾಗಿದೆ. ಈ ಬಾರಿ ಮಳೆಗೆ ಶಾಲಾ ಕೋಠಡಿಗಳು ಸೋರುತ್ತಿದೆ. ಅನೇಕ ಶಾಲೆಗಳ ಮೇಲ್ಪಾವಣಿಗಳು ಕುಸಿಯುವ ಹಂತದಲ್ಲಿದೆ. ಪೀಠೋಪಕರಣಗಳು, ಶೌಚಾಲಯಗಳು ಇಲ್ಲದೇ ಕಲಿಕೆ ಕುಂಠಿತಗೊಳ್ಳುತ್ತಿದೆ. ಸರ್ಕಾರಿ ಶಾಲೆಗಳನ್ನು ಬಲಪಡಿಸಿಬೇಕಾದ ಅವಶ್ಯಕತೆ ತೀವ್ರವಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಎಲ್ಲರಿಗೂ ಶಿಕ್ಷಣ ನೀಡುವ ಪ್ರಾಥಮಿಕ ಜವಾಬ್ದಾರಿಯನ್ನು ನೆರವೇರಿಸಬೇಕೆಂಬುದು ರಾಜ್ಯದ ಜನರ ಆಗ್ರಹವಾಗಿದೆ. ಜನರು ನೀಡುವ ತೆರಿಗೆ ಹಣದಲ್ಲಿ ಅಭಿವೃದ್ಧಿಪಡಿಸಬೇಕಾದ, ಜನಗಳ ಸ್ವತ್ತಾದ ಈ ಶಾಲೆಗಳನ್ನು ಈಗ ಸರಕಾರ ಕಾರ್ಪೊರೇಟ್ ಕಂಪೆನಿಗಳ ಮಡಿಲಿಗಿಡಲು ಹೊರಟಿದೆ. ಮಹಾನ್ ವ್ಯಕ್ತಿಗಳ ಹೆಸರನ್ನು ಇಡುವ ಬದಲು ಈ ಕಾರ್ಪೊರೇಟ್ ಕಂಪೆನಿಗಳ ಹೆಸರು ಶಾಲೆಗಳಿಗೆ ಇಡುವ ಪ್ರಸ್ತಾಪವನ್ನು ಮಾಡಿರುವುದು, ಸರಕಾರ ದಲ್ಲಾಳಿ ಕೆಲಸಕ್ಕೆ ಇಳಿದಿದೆಯೇ ಎಂಬ ಪ್ರಶ್ನೆ ಮೂಡಿಸುತ್ತಿದೆಯೇ? ಎಂದು ಅವರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕಾರ್ಪೊರೇಟ್ ಕಂಪೆನಿಗಳ ಭಿಕ್ಷಾ ಹಣದಲ್ಲಿ ನಮ್ಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಬದಲು ನಮ್ಮ ಹಕ್ಕಿನ ತೆರಿಗೆ ಹಣದಲ್ಲಿ ಶಾಲೆಗಳನ್ನು ನಿರ್ಮಿಸಿ ಅಭಿವೃದ್ಧಿ ಪಡಿಸಲಿ. ಇನ್ನು ಕಾರ್ಪೊರೇಟ್ ಕಂಪೆನಿಗಳ ಮೇಲೆ ತೆರಿಗೆ ಹೆಚ್ಚಿಸಿ ಅವರಿಂದ ನ್ಯಾಯಯುತವಾಗಿ ಹಣ ವಸೂಲಿ ಮಾಡಲಿ ಎಂದು ಗಂಗರಾಜ ಅಳ್ಳಳ್ಳಿ ಅವರು ಆಗ್ರಹ ಮಾಡಿದ್ದಾರೆ.