ಪ್ರಜಾವೀಕ್ಷಣೆ ಸುದ್ದಿ :
BIG NEWS : ರೈಲ್ವೆ ಹಳಿಗೆ ಕುರಿಗಳ ದುರ್ಮರಣ : ಬೀದಿಗೆ ಬಂದ ಕುರಿಗಾಹಿ ಕುಟುಂಬ..!

ಕೊಪ್ಪಳ : ಕುರಿಗಾಹಿಯು ತನ್ನ ಕುರಿಗಳನ್ನು ರೈಲ್ವೆ ಹಳಿಯ ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವ ವೇಳೆ ವೇಗದೂತ ರೈಲು ಡಿಕ್ಕಿ ಹೊಡೆದ ಪರಿಣಾಮ 70ಕ್ಕೂ ಹೆಚ್ಚು ಕುರಿಗಳು ದುರ್ಮರಣ ಹೊಂದಿದ ಘಟನೆ ಸಂಭವಿಸಿದೆ.
ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ರೈಲು ನಿಲ್ದಾಣದ ಬಳಿ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಮೋರನಹಳ್ಳಿ ಗ್ರಾಮದ ತಿಮ್ಮಣ ಮಾಗಳದ ಎಂಬ ಕುರಿಗಾಹಿಗೆ ಸೇರಿದ್ದ ಕುರಿಗಳು ಶನಿವಾರ ಬೆಳಗ್ಗೆ ಜಿಲ್ಲೆಯ ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ ಬಳಿ ರೈಲ್ವೆ ಹಳಿ ದಾಟಿ ಕುರಿಗಳನ್ನು ತೆಗೆದುಕೊಂಡು ಹೋಗುವ ಸಮಯದಲ್ಲಿ ಎರಡು – ಮೂರು ಕುರಿಗಳು ರೈಲ್ವೆ ಗೇಟ್ ದಾಟಿ ಹೋದ ಕಾರಣ ಎಲ್ಲ ಕುರಿಗಳು ರೈಲ್ವೆ ಹಳಿಗೆ ಬಂದಿವೆ. ಅದೇ ವೇಳೆ ಕೊಪ್ಪಳ ಕಡೆಯಿಂದ ಗದಗ್ ಕಡೆಗೆ ಹೊರಟಿದ್ದ ಹರಿಪ್ರಿಯಾ ಎಕ್ಸ್ಪ್ರೆಸ್ ರೈಲು ಗಾಡಿಯು ಸಾಗುತ್ತಿದ್ದು ರೈಲ್ವೆ ಹಾರ್ನ್ ಗೆ ಬೆದರಿ ಕುರಿಗಳು ರೈಲ್ವೆ ಹಳಿಗುಂಟ ಓಡಿ ಹೋದ ಪರಿಣಾಮ ಸುಮಾರು 70 ಕ್ಕಿಂತ ಅಧಿಕ ಕುರಿಗಳು ರೈಲು ಹೊಡೆತಕ್ಕೆ ದುರ್ಮರಣ ಹೊಂದಿವೆ.
ಈ ಘಟನೆಯಿಂದ ಭಯಭೀತರಾದ ಇಬ್ಬರು ಕುರಿಗಾಹಿಗಳಲ್ಲಿ ಒಬ್ಬ ಕುರಿಗಾಹಿ ಸ್ಥಳದಿಂದ ಓಡಿ ಹೋಗಿದ್ದಾನೆ ಇನ್ನೂಬ್ಬನನ್ನು ರೈಲ್ವೆ ಸಿಬ್ಬಂದಿ ತನಿಖೆಗಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
