ಕೊಪ್ಪಳ ಮಾ. 26 : ನಗರಸಭೆಯಲ್ಲಿ ಬೋಗಸ್ ಕಾಮಗಾರಿಗಳ ಹೆಸರಲ್ಲಿ ಸುಮಾರು ₹10 ಕೋಟಿ ನಷ್ಟ ಉಂಟುಮಾಡಿದ ಆರೋಪದ ಹಿನ್ನೆಲೆಯಲ್ಲಿ, ನಗರಸಭೆ ಜೆಇ ಸೋಮಲಿಂಗಪ್ಪ ಅವರನ್ನು ಪೌರಾಡಳಿತ ನಿರ್ದೇಶನಾಲಯ ಮಾ. 16ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಅಮಾನತು ಆದೇಶ ಹೊರಬಿದ್ದಿದ್ದು, ಘಟನೆಗೆ ಸಂಬಂಧಿಸಿದಂತೆ 10 ದಿನಗಳ ಬಳಿಕ ಇದು ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.
2023ರಿಂದ 2025ರವರೆಗೆ ಕೈಗೊಳ್ಳಲಾದ ಒಟ್ಟು 336 ಕಾಮಗಾರಿಗಳಲ್ಲಿ ಕೆಲವು ಕಾಮಗಾರಿಗಳನ್ನು ಕಳಪೆವಾಗಿ ನಿರ್ವಹಿಸಿ, ಉಳಿದ ಕಾಮಗಾರಿಗಳ ಹೆಸರಿನಲ್ಲಿ ಬೋಗಸ್ ಬಿಲ್ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಹಗರಣದಲ್ಲಿ ಹಿಂದಿನ ಪೌರಾಯುಕ್ತ ಗಣಪತಿ ಪಾಟೀಲ್, ಎಇಇ ಮಧುರ ಮಗದೂರ ಹಾಗೂ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ನೇಮಕಗೊಂಡಿದ್ದ ಎಸ್.ಆರ್. ಕನ್ಸಲ್ಟಂಟ್ ಸಂಸ್ಥೆಯ ಪಾತ್ರವೂ ಇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಸಂಬಂಧ 2025ರ ಸೆಪ್ಟೆಂಬರ್ ತಿಂಗಳಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.