LOCAL NEWS : ಬ್ಲಾಕ್ ಕಾಂಗ್ರೆಸ್ ಹೇಳಿಕೆ ಹಿಂಪಡೆಯಿರಿ’ – ಈರಪ್ಪ ಕುಡಗುಂಟಿ ಆಗ್ರಹ..!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಜೂನ್ 16 : ‘ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ಭೇಟಿಯಾಗಿದ್ದು, ರಾಜಕೀಯ ಉದ್ದೇಶದಿಂದಲ್ಲ, ಸೌಜನ್ಯಕ್ಕಾಗಿ ಶುಭಾಶಯ ಕೋರಲು ಮಾತ್ರ’ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಈರಪ್ಪ ಕುಡಗುಂಟಿ ಸ್ಪಷ್ಟಪಡಿಸಿರು.
ಇಂದು (ಜೂ. 16, ಮಂಗಳವಾರ) ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸೌಜನ್ಯಕ್ಕಾಗಿ ಶುಭಾಶಯ ಕೋರಲು ಭೇಟಿಯಾಗಿದ್ದೆವು. ರಾಜಕೀಯ ಚರ್ಚೆ ಏನೂ ನಡೆದಿಲ್ಲ’ ನಾನು ಸಹ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂಬುದನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮರೆತಿರುವಂತೆ ಕಾಣುತ್ತಿದೆ. 2018ರಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ನಾನು ಕಾರ್ಯನಿರ್ವಹಿಸಿದ್ದು ತದನಂತರ 2023ರ ಮೇ 23 ರಂದು ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದು ಅಂದಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಸವರಾಜ ಉಳ್ಳಾಗಡ್ಡಿ ಹಾಗೂ ಅಭ್ಯರ್ಥಿ ಬಸವರಾಜ ರಾಯರೆಡ್ಡಿ ಅವರ ಆದೇಶದಂತೆ ಕ್ಷೇತ್ರದ 144 ಗ್ರಾಮಗಳಿಗೆ ಸಂಚರಿಸಿ ರಾಯರೆಡ್ಡಿ ಗೆಲುವಿಗೆ ಶ್ರಮಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ ಹಾಗೂ 2023 ನಂತರ ನಾನು ಬಿಜೆಪಿ ಕಡೆ ತಿರುಗಿ ಸಹ ನೋಡಿರುವುದಿಲ್ಲ ಇದೆಲ್ಲ ಗೊತ್ತಿದ್ದರೂ ಸಹ ಈ ರೀತಿ ಆರೋಪ ಮಾಡಿರುವುದು ಆಶ್ಚರ್ಯಕರ ಸಂಗತಿಯನ್ನು ಉಂಟು ಮಾಡಿದೆ ಎಂದರು.
‘ಕಳಕಪ್ಪ ಕಂಬಳಿ ಅವರು ಶುಭಾಶಯ ಕೋರಲು ಬಿ.ಕೆ ಹರಿಪ್ರಸಾದ್ ಅವರನ್ನು ಭೇಟಿ ಮಾಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಮುಜುಗರ ತರುವುದಾದರೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದಕ್ಕೂ ಮುನ್ನ ಬಿ.ಎಸ್ ಯಡಿಯೂರಪ್ಪ, ಜಗದೀಶ ಶೆಟ್ಟರ್, ಸೇರಿದಂತೆ ಇನ್ನಿತರ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದು ಇವರಿಗೆ ಮುಜುಗರ ಅನ್ನಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಯಲಬುರ್ಗಾ ಹಾಗೂ ಕುಕನೂರು ಬ್ಲಾಕ್ ಕಾಂಗ್ರೆಸ್ ತಮ್ಮ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಈರಪ್ಪ ಕುಡಗುಂಟಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೀಲನಗೌಡ ಪೊಲೀಸ್ ಪಾಟೀಲ್, ಫಕೀರಪ್ಪ ತಳವಾರ್, ಪ್ರಕಾಶ್ ಚಿನ್ನುರೂ ಸೇರಿದಂತೆ ಇತರರು ಉಪಸ್ಥಿತರಿದ್ದರು.
“ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರನ್ನು ಭೇಟಿ ಮಾಡಿರುವುದು ಯಾವುದೇ ವಿಷಯದಿಂದಲ್ಲ ಬದಲಿಗೆ ಸೌಜನ್ಯಯುತ ಭೇಟಿಯಾಗಿದ್ದು ಅವರಿಗೆ ಅಭಿನಂದನೆ ತಿಳಿಸುವ ಉದ್ದೇಶವನ್ನು ಮಾತ್ರ ನಮ್ಮದಾಗಿದೆ”