You are currently viewing PV NEWS EXCLUSIVE | ಕುಕನೂರು | ಸರ್ವೆ ನಂ. 78ರಲ್ಲಿ ಭೂ ಅಕ್ರಮಗಳ ಸರಣಿ ಆರೋಪ: ಪ್ರಜಾಸೌಧ ಕಾಮಗಾರಿಗೆ ಅಡ್ಡಿ ಒಡ್ಡುವವರ ವಿರುದ್ಧ ಕ್ರಮಕ್ಕೆ ಆಗ್ರಹ!

PV NEWS EXCLUSIVE | ಕುಕನೂರು | ಸರ್ವೆ ನಂ. 78ರಲ್ಲಿ ಭೂ ಅಕ್ರಮಗಳ ಸರಣಿ ಆರೋಪ: ಪ್ರಜಾಸೌಧ ಕಾಮಗಾರಿಗೆ ಅಡ್ಡಿ ಒಡ್ಡುವವರ ವಿರುದ್ಧ ಕ್ರಮಕ್ಕೆ ಆಗ್ರಹ!

PV NEWS EXCLUSIVE | ಸರ್ವೆ ನಂ. 78ರಲ್ಲಿ ಭೂ ಅಕ್ರಮಗಳ ಸರಣಿ ಆರೋಪ: ಪ್ರಜಾಸೌಧ ಕಾಮಗಾರಿಗೆ ಅಡ್ಡಿ ಒಡ್ಡುವವರ ವಿರುದ್ಧ ಕ್ರಮಕ್ಕೆ ಆಗ್ರಹ!

PV NEWS ಕನ್ನಡ 24×7 : 

ಕುಕನೂರು, ಜು. 28 (PV NEWS ಕನ್ನಡ 24×7): ತಾಲೂಕಿನ ಸರ್ವೆ ನಂ. 78ರ ಸರ್ಕಾರಿ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಪ್ರಜಾಸೌಧ ಕಾಮಗಾರಿಗೆ ಅಡ್ಡಿಪಡಿಸುವವರ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮಾನ ಮನಸ್ಕರ ನಾಗರಿಕ ಬಳಗದ ಪ್ರಮುಖ ಹಾಗೂ ವಕೀಲ ಬಸವರಾಜ್ ಜಂಗ್ಲಿ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರಜಾಸೌಧ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದ್ದು, ಕೆಲವರು ವಿವಿಧ ರೀತಿಯ ಆಕ್ಷೇಪಣೆಗಳನ್ನು ಮುಂದಿಟ್ಟು ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕು ರಚನೆಯಾದ ಬಳಿಕ ಸರ್ಕಾರಿ ಇಲಾಖೆಗಳಿಗಾಗಿ ಸಮರ್ಪಕ ಕಟ್ಟಡಗಳ ಕೊರತೆ ಇತ್ತು. ಈ ಹಿನ್ನೆಲೆಯಲ್ಲಿ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಪ್ರಜಾಸೌಧ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಆದರೆ, ವೈಯಕ್ತಿಕ ಹಾಗೂ ಪಟ್ಟಭದ್ರ ಹಿತಾಸಕ್ತಿಯಿಂದ ಕೆಲವರು ಸುಳ್ಳು ದೂರುಗಳನ್ನು ನೀಡುತ್ತಾ ಕಾಮಗಾರಿ ಸ್ಥಗಿತಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಜಾಸೌಧ ಕಾಮಗಾರಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್ ಈಗಾಗಲೇ ವಜಾಗೊಳಿಸಿದೆ. ಆದರೂ ಕಾಮಗಾರಿಗೆ ಅಡ್ಡಿಪಡಿಸುವುದು ನ್ಯಾಯಾಂಗದ ಆದೇಶಗಳ ಉಲ್ಲಂಘನೆಯಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಗುದ್ನೇಪ್ಪನ ಮಠ ದೇವಸ್ಥಾನದ ಏಳು ಮಂದಿ ಅರ್ಚಕರಾದ ಗುರುಪಾದಯ್ಯ, ಶ್ರೀಪಾದಯ್ಯ, ಗುರುಪುತ್ರಯ್ಯ, ಪಂಚಾಕ್ಷರಯ್ಯ, ಬಸಯ್ಯ, ಗುರುಸಂಗಯ್ಯ ಹಾಗೂ ಗದಗಯ್ಯ ಅವರಿಗೆ ಯಲಬುರ್ಗಾ ಭೂ ನ್ಯಾಯ ಮಂಡಳಿಯ ಆದೇಶದಂತೆ ಒಟ್ಟು ಸುಮಾರು 45 ಎಕರೆ ಜಮೀನನ್ನು ಮಂಜೂರು ಮಾಡಲಾಗಿತ್ತು ಎಂದು ತಿಳಿಸಿದರು.

ಸೇವಾವೃತ್ತಿಗಾಗಿ ಮಂಜೂರಾಗಿದ್ದ ಈ ಜಮೀನಿನ ಒಂದು ಭಾಗವನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಒಟ್ಟು 18 ಎಕರೆ 17 ಗುಂಟೆ ಜಮೀನು ವಿವಿಧ ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾವಣೆಯಾಗಿದೆ ಎಂದು ಅವರು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನೀಡಿದ ಮಾಹಿತಿಯಂತೆ, ಸರ್ವೆ ನಂ. 78/11ರಲ್ಲಿ 2 ಎಕರೆ 33 ಗುಂಟೆ, ಸರ್ವೆ ನಂ. 78/12ರಲ್ಲಿ 2 ಎಕರೆ 20 ಗುಂಟೆ ಹಾಗೂ ಸರ್ವೆ ನಂ. 78/13ರಲ್ಲಿ 2 ಎಕರೆ ಜಮೀನು ಸಚಿನ್ ಬಿ. ಆಚಾರ್ ಹೆಸರಿಗೆ, ಸರ್ವೆ ನಂ. 78/12/4ರಲ್ಲಿ 2 ಎಕರೆ 29 ಗುಂಟೆ ಜಮೀನು ಅನಿಲ್ ಆಚಾರ್ ಹೆಸರಿಗೆ, ಸರ್ವೆ ನಂ. 78/3ರಲ್ಲಿ 18 ಗುಂಟೆ ಜಮೀನು ಮಂಜುನಾಥ್ ಹಿರೇಮಠ ಹಾಗೂ ಇದೇ ಸರ್ವೆ ಸಂಖ್ಯೆಯಲ್ಲಿ 32 ಗುಂಟೆ ಜಮೀನು ಗುದ್ನಯ್ಯ ಬಸಯ್ಯ ಹೆಸರಿಗೆ, ಸರ್ವೆ ನಂ. 78/17ರಲ್ಲಿ 2 ಎಕರೆ 30 ಗುಂಟೆ ಜಮೀನು ಅಂದಪ್ಪ ಜಿ.ಎಸ್. ಹೆಸರಿಗೆ, ಸರ್ವೆ ನಂ. 78/18ರಲ್ಲಿ 2 ಎಕರೆ ಜಮೀನು ಮಹಾವೀರ್ ಹಾಗೂ ಸರ್ವೆ ನಂ. 78/15ರಲ್ಲಿ 2 ಎಕರೆ 15 ಗುಂಟೆ ಜಮೀನು ರಶೀದ್ ಹೆಸರಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.

ಈ ಜಮೀನುಗಳ ವರ್ಗಾವಣೆಯಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಹಾಲಪ್ಪ ಆಚಾರ್ ಅವರ ಕುಟುಂಬದವರ ಹೆಸರೂ ಕೇಳಿಬರುತ್ತಿದೆ ಎಂದು ಆರೋಪಿಸಿದ ಅವರು, ಈ ಕುರಿತು ಸಂಬಂಧಪಟ್ಟ ಇಲಾಖೆಗಳು ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಇದೇ ಸರ್ವೆ ನಂ. 78ರ ವ್ಯಾಪ್ತಿಯ ಕುಕನೂರು ಪಟ್ಟಣ ಪಂಚಾಯಿತಿಯ 19ನೇ ವಾರ್ಡಿನ ಗುದ್ನೇಪ್ಪನ ಮಠ ಪ್ರದೇಶದಲ್ಲೂ ಸರ್ಕಾರಿ ಜಮೀನಿನಲ್ಲಿ ವ್ಯಾಪಕ ಅಕ್ರಮ ಒತ್ತುವರಿ ನಡೆದಿದೆ ಎಂದು ಅವರು ಆರೋಪಿಸಿದರು. ಯಾವುದೇ ರೀತಿಯ ಹಕ್ಕುಪತ್ರಗಳಿಲ್ಲದೆ 137 ಮನೆಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂದು ದೂರಿದ ಅವರು, ಈ ಪ್ರದೇಶದಲ್ಲಿ ಒಟ್ಟು 194 ಮನೆಗಳಿದ್ದು, ಅವುಗಳಲ್ಲಿ 49 ಪಕ್ಕಾ ಮನೆಗಳು, 137 ಕಚ್ಚಾ ಮನೆಗಳು ಹಾಗೂ ನಿರ್ಮಾಣ ಹಂತದಲ್ಲಿರುವ 8 ಮನೆಗಳಿವೆ ಎಂದು ಮಾಹಿತಿ ನೀಡಿದರು. ಇಲ್ಲಿ ವಾಸಿಸುತ್ತಿರುವ ಕೆಲವರು ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿ ತಮ್ಮ ಇಚ್ಛೆಯಂತೆ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಈ ಕುರಿತು ಕಂದಾಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಸಮಗ್ರ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಜಮೀನಿನಲ್ಲಿ ಅಕ್ರಮ ಒತ್ತುವರಿ, ಅಕ್ರಮ ಮನೆಗಳ ನಿರ್ಮಾಣ ಹಾಗೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕಂದಾಯ ಇಲಾಖೆ ಹಾಗೂ ಸ್ಥಳೀಯ ಆಡಳಿತವು ಇಂತಹ ಪ್ರಕರಣಗಳ ವಿರುದ್ಧ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಈ ಸಂಬಂಧ ಲೋಕಾಯುಕ್ತಕ್ಕೂ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಪ್ರಜಾಸೌಧ ನಿರ್ಮಾಣವು ಸಾರ್ವಜನಿಕ ಹಿತಾಸಕ್ತಿಯ ಯೋಜನೆಯಾಗಿದ್ದು, ಕಾಮಗಾರಿ ನಿರಾತಂಕವಾಗಿ ನಡೆಯಲು ಅಗತ್ಯ ಪೊಲೀಸ್ ಭದ್ರತೆ ಒದಗಿಸಬೇಕು. ಕಾಮಗಾರಿಗೆ ಅಡ್ಡಿಪಡಿಸುವವರ ವಿರುದ್ಧ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸುವುದರ ಜೊತೆಗೆ, ಸರ್ಕಾರಿ ಜಮೀನುಗಳ ಅಕ್ರಮ ಒತ್ತುವರಿ, ಭೂ ವರ್ಗಾವಣೆ ಹಾಗೂ ಅನಧಿಕೃತ ಮನೆ ನಿರ್ಮಾಣದ ಕುರಿತು ಕೇಳಿಬಂದಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಮೇಶ್ ಗಜಕೋಶ, ದೇವೇಂದ್ರ ತೊಂಡಿಹಾಳ, ಕಾರ್ತಿಕ್ ಜಾದವ್ ಹಾಗೂ ಮುತ್ತಣ್ಣ ರಾಜೂರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!