LOCAL NEWS : ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕರಿಗೆ ಮನವರಿಕೆ : ಯಂಕಣ್ಣ ಯರಾಶಿ!!
ಕುಕನೂರು : ತಾಲೂಕಿನಲ್ಲಿ ನೂತನ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂಬ ಕೂಗು, ಬೇಡಿಕೆ ಹೆಚ್ಚುತ್ತಿದ್ದು ತ್ವರಿತವಾಗಿ ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವಂತೆ ಶಾಸಕ ರಾಯರಡ್ಡಿ ಅವರಿಗೆ ಒತ್ತಡದ ಮೂಲಕ ಮನವರಿಕೆ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೆ ಎಲ್ ಈ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಯಂಕಣ್ಣ ಯರಾಶಿ ಅವರು ಕ್ರೀಡಾಪಟುಗಳಿಗೆ ಭರವಸೆ ಮಾತುಗಳನ್ನು ಹೇಳಿದರು.
ಕುಕನೂರು ಪಟ್ಟಣದ ವಿದ್ಯಾನಂದ ಗುರುಕುಲ ಕಾಲೇಜು ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕುಕನೂರು ತಾಲೂಕಿನಲ್ಲಿ ನೂತನ ಕ್ರೀಡಾಂಗಣದ ಅವಶ್ಯಕತೆ ಇದ್ದು ಈ ಕುರಿತಂತೆ ಶಾಸಕ ಬಸವರಾಜ್ ರಾಯರಡ್ಡಿ ಅವರೊಂದಿಗೆ ಮಾತನಾಡಿ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಮನವರಿಕೆ ಮಾಡುತ್ತೇವೆ, ಇನ್ನೆರಡು ವರ್ಷಗಳ ಒಳಗೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಆಗುವ ಭರವಸೆಯನ್ನು ಈ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದರು.
ಕ್ರೀಡಾಕೂಟದಲ್ಲಿ ಕುಕನೂರು ತಾಲೂಕಿನ 14 ಕಾಲೇಜಿನ ಕ್ರೀಡಾಪಟುಗಳು ಕೂಟದಲ್ಲಿ ಭಾಗವಹಿಸಿದ್ದರು. ಪಟ್ಟಣ ಪಂಚಾಯತ್ ಅಧ್ಯಕ್ಷೆ ಲಲಿತವ್ವ ಯಡಿಯಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪ ಪಂ ಉಪಾಧ್ಯಕ್ಷ ಪ್ರಶಾಂತ್ ಆರುಬೆರಳಿನ, ಗುರುಕುಲ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ, ವಿ ಜಾಗೀರ್ ದಾರ್, ಕೆ ಎಲ್ ಈ ಸಂಸ್ಥೆಯ ಪ್ರಾಚಾರ್ಯ ಅರುಣ್ ಕುಮಾರ್ ಹಿರೇಮಠ, ಜಿಲ್ಲಾ ದೈಹಿಕ ಶಿಕ್ಷಕರ ಸಂಚಾಲಕ ತಿರುಪತಿ ನಾಯಕ್, ಉಮೇಶ್ ಕಂಬಳಿ, ಫಕೀರಪ್ಪ ವಜ್ರಬಂಡಿ, ಶರಣಪ್ಪ ವಿರಾಪುರ, ಇತರ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.