ಧಾರವಾಡ : 1000ಕ್ಕೂ ಹೆಚ್ಚು ಹೊಸ ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿ ಎಐಎಂಎಸ್ಎಸ್ ಹಾಗೂ
ಎಐಡಿವೈಓ ವತಿಯಿಂದ ಜಂಟಿಯಾಗಿ ನಗರ ವಿವೇಕಾನಂದ ವೃತ್ತದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
Conscious Mind : ನಿಮ್ಮ ಮನಸ್ಸಿನ ಕೇಂದ್ರೀಕೃತಕ್ಕೆ ಇಲ್ಲಿದೆ ಪರಿಹಾರ, ತಪ್ಪದೇ ಇದನ್ನು ಓದಿ…
BREAKING : ಕಾವೇರಿ ನೀರಿಗಾಗಿ ರಕ್ತದಲ್ಲಿ ಪತ್ರ ಬರೆದ ನೆನಪಿರಲಿ ಪ್ರೇಮ್!!
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಎಂಎಸ್ಎಸ್ ನ ಜಿಲ್ಲಾಧ್ಯಕ್ಷ ಮಧುಲತಾ ಗೌಡರ್, “ರಾಜ್ಯದಲ್ಲಿ ಹೊಸದಾಗಿ 1000ಕ್ಕೂ ಹೆಚ್ಚು ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ ಅಬಕಾರಿ ಇಲಾಖೆಯ ನಿರ್ಧಾರವು ಸಮಾಜಘಾತುಕವಾದುದು.
ಈಗಾಗಲೇ ಮದ್ಯಪಾನದ ದುಶ್ಚಟದಿಂದಾಗಿ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ.
ಒಂದೆಡೆ ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜೀವನ ತತ್ತರಿಸುತ್ತಿದ್ದರೆ ಇನ್ನೊಂದೆಡೆ ನೈತಿಕ ಮೌಲ್ಯ ಕುಸಿಯುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಅಪರಾಧಗಳ ಹೆಚ್ಚಳಕ್ಕೆ ಮದ್ಯಪಾನವೂ ಒಂದು ಮುಖ್ಯ ಕಾರಣ ಎಂದು ವರದಿಗಳು ಸಾಬೀತುಪಡಿಸುತ್ತಲೇ ಇವೆ. ಕೌಟುಂಬಿಕ ದೌರ್ಜನ್ಯಗಳಂತೂ ಇನ್ನೂ ಕ್ರೂರ ರೂಪ ಪಡೆದುಕೊಳ್ಳುತ್ತಿವೆ. ಹೆಣ್ಣು ಮಕ್ಕಳು ಬೆವರು ಸುರಿಸಿ ದುಡಿದ ಹಣವನ್ನು ಗಂಡಂದಿರು ಕುಡಿತಕ್ಕಾಗಿ ಹೊಡೆದು ಬಡಿದು ಕಸಿದುಕೊಳ್ಳುವುದು ಈಗಲೂ ಮನೆ ಮನೆಯ ಕಥೆಯಾಗಿದೆ. ಇದರಿಂದಾಗಿ ಎಷ್ಟೋ ಹೆಣ್ಣುಮಕ್ಕಳು ತಮಗೂ ತಮ್ಮ ಮಕ್ಕಳಿಗೂ ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಉಪವಾಸ ಮಲಗುವಂತಾಗುತ್ತಿದೆ.
SPECIAL STORY : ಕಣ್ಣಿನ ವೈದ್ಯ ಎಂದು ಹೆಸರುವಾಸಿ ಆದ ಚಿಕ್ಕಬಗನಾಳ ಗ್ರಾಮದ ಆನಂದಪ್ಪ..!
ಮಹಿಳೆಯರ ಸಬಲೀಕರಣ ಮಾಡುತ್ತೇವೆ ಎಂದು ಘಂಟಾಘೋಷ್ಯವಾಗಿ ಹೇಳುತ್ತಿರುವ ರಾಜ್ಯ ಸರ್ಕಾರ ಈಗ ಅದೇ ಮಹಿಳೆಯರ ಮೇಲೆ ಕ್ರೂರ ಅಪರಾಧಗಳಿಗೆ ಕಾರಣವಾಗುತ್ತಿದೆ. ಸಂಪೂರ್ಣ ಮದ್ಯ ನಿಷೇಧಕ್ಕಾಗಿ ಮಹಿಳಾ ಸಮುದಾಯ ಕೇಳಿಕೊಳ್ಳುತ್ತಿದ್ದರೆ ಸರ್ಕಾರ ಮಾತ್ರ ಇನ್ನೂ ಹೆಚ್ಚು ಪರವಾನಗಿ ಕೊಡುತ್ತಿದೆ. ಇದು ಯಾವುದೇ ಸರ್ಕಾರಗಳ ನೈಜ ಮುಖವಾಡ ಎಂದು ಮಹಿಳಾ ಸಮುದಾಯ ಅರ್ಥ ಮಾಡಿಕೊಂಡು ಒಕ್ಕೊರಲಿನಿಂದ ಇದರ ವಿರುದ್ಧ ಬೀದಿಗಿಳಿಯಬೇಕು” ಎಂದು ಕರೆ ನೀಡಿದರು.
ಎಐಡಿವೈಓ ನ ಜಿಲ್ಲಾಧ್ಯಕ್ಷರಾದ ಭವಾನಿಶಂಕರ ಗೌಡರ್ ಮಾತನಾಡುತ್ತಾ “ಇಂದು ಹಲವಾರು ಸಮಾಜಘಾತುಕ ಕೃತ್ಯಗಳಿಗೆ ಮದ್ಯಪಾನ ಎಡೆ ಮಾಡಿಕೊಡುತ್ತಿದೆ. ಉದ್ಯೋಗ ಗ್ಯಾರಂಟಿ ಬದಲಿ ಮದ್ಯ ಗ್ಯಾರಂಟಿ ಕೊಡುತ್ತಿರುವ ಸರ್ಕಾರದ ನೀತಿ ದುರದೃಷ್ಟಕರ.ಇದೇ ಕುಡಿತದಿಂದ ಎಷ್ಟೋ ಎಳೆಯ ಜೀವಗಳು ರಸ್ತೆ ಅಪಘಾತಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಕುಡಿತದ ಚಟಕ್ಕೆ ಬಲಿಯಾಗಿ ಮೌಲ್ಯಯುತ ಜೀವನ ನಡೆಸಬೇಕಾದ ಗಂಡು ಮಕ್ಕಳು ಹಾದಿ ತಪ್ಪಿ ಅನಾರೋಗ್ಯಕ್ಕೆ ಬಲಿಯಾಗುತ್ತಿದ್ದಾರೆ. ಸಣ್ಣ ಮಕ್ಕಳು ಕೂಡ ಕುಡಿಯುವುದನ್ನು ಕಲಿಯುತ್ತಿದ್ದಾರೆ. ಇವೆಲ್ಲವನ್ನು ನಾವು ತೀವ್ರ ಆತಂಕದಿಂದ ಗಮನಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಮಾಜದ ನೈತಿಕ ಸ್ವಾಸ್ಥ್ಯವನ್ನು ಉಳಿಸಿ-ಬೆಳೆಸುವುದನ್ನು ಬಿಟ್ಟು, ಜನಸಾಮಾನ್ಯರ ನೈತಿಕ ಬೆನ್ನೆಲುಬನ್ನು ಮುರಿಯಲು ಕಾರಣವಾಗುವ ಮದ್ಯಪಾನವನ್ನು ಸರ್ಕಾರ ಪ್ರೋತ್ಸಾಹಿಸುತ್ತಿರುವುದು ಅತ್ಯಂತ ಖೇದಕರ” ಎಂದು ಹೇಳಿದರು.
ಎಐಎಂಎಸ್ಎಸ್ ನ ಜಿಲ್ಲಾ ಕಾರ್ಯದರ್ಶಿಗಳಾದ ಗಂಗೂಬಾಯಿ ಕೊಕರೆ ಪ್ರತಿಭಟನೆ ಅಧ್ಯಕ್ಷತೆಯನ್ನು ವಹಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ,ರಂಜಿತ್, ದೇವಮ್ಮ,ಪ್ರೀತಿ, ಸೇರಿದಂತೆ,ವಿದ್ಯಾರ್ಥಿಗಳು, ಯುವ ಜನರ ಹಾಗೂ ಹಲವಾರು ಹಳ್ಳಿ,ಬಡಾವಣೆಯ ಹೆಣ್ಣು ಮಕ್ಕಳು ಪ್ರತಿಭಟನೆಗೆ ಧ್ವನಿಗೂಡಿಸಿದರು.