ಕೊಪ್ಪಳ : ಈಚೆಗೆ ಕೊಲೆಯಾದ ನಗರದ ಕುರುಬರ ಓಣಿಯ ಗವಿಸಿದ್ದಪ್ಪ ನಾಯಕ ನಿವಾಸಕ್ಕೆ ಇಂದು (ಶನಿವಾರ) ಹರಿಹರದ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಭೇಟಿ ನೀಡಿ, ಸಾಂತ್ವಾನ ಹೇಳಿದರು.
ವಾಲ್ಮೀಕಿ ನಾಯಕ ಸಮಾಜದ ಯುವಕ ಗವಿಸಿದ್ದಪ್ಪ ನಾಯಕನ ಕೊಲೆಯಾಗಿರುವುದು ಅನ್ಯಾಯ. ಇದರಿಂದ ತುಂಬಾ ನೋವಾಗಿದೆ. ನಿಮ್ಮ ಹಿಂದೆ ಸಮಾಜ ಇರಲಿದೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ. ಈ ನಿಟ್ಟಿನಲ್ಲಿಯೇ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ನೇತೃತ್ವದಲ್ಲಿ ಆ. ೧೧ರಂದು ಸೋಮವಾರ ಪ್ರತಿಭಟನೆ ನಡೆಯಲಿದೆ. ನಿಮ್ಮ ಜತೆಗೆ ಸಮಾಜವಿದೆ. ಮಠವೂ ಇದೆ. ನಿಮಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಕುಟುಂಬಸ್ಥರಾದ ತಂದೆ ನಿಂಗಜ್ಜ, ತಾಯಿ ದೇವಣ್ಣ, ಸಹೋದರಿಯರಾದ ಅನ್ನಪೂರ್ಣ, ದುರ್ಗಮ್ಮ, ಉಮಾ, ಚಿಕ್ಕಪ್ಪ ಯಮನೂರಪ್ಪ ಗೆ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಧೈರ್ಯ ತುಂಬಿ, ಸಾಂತ್ವಾನ ಹೇಳಿದರು.
ಮಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್.ಪಾಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ಡೊಣ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ನಾಯಕ, ಯುವ ಘಟಕದ ಜಿಲ್ಲಾಧ್ಯಕ್ಷ ರವಿ ವಕೀಲರು, ಸಮಾಜದ ಮುಖಂಡರಾದ ಟಿ.ರತ್ನಾಕರ, ಬಿಲ್ಗಾರ್ ನಾಗರಾಜ, ರಾಮಣ್ಣ ನಾಯಕ, ಹನುಮೇಶ ನಾಯಕ, ಮಂಜುನಾಥ ಗೊಂಡಬಾಳ, ಕರಿಯಪ್ಪ, ಚನ್ನಪ್ಪ, ಹನುಮಂತಪ್ಪ, ಶಿವರಡ್ಡಿ ವಕೀಲ, ಗಂಗಾವತಿ ಜೋಗದ ವೀರಭದ್ರಪ್ಪ, ನಾರಾಯಣಪ್ಪ ನಾಯಕ, ಶುಕ್ರಾಜ್ ತಾಳಕೇರಿ, ಮಾನಪ್ಪ ಇದ್ದರು.
ವಾಲ್ಮೀಕಿ ಶ್ರೀಗಳ ಗೌಪ್ಯ ಸಭೆ
ನಗರದಲ್ಲಿ ಈಚೆಗೆ ನಡೆದ ಗವಿಸಿದಪ್ಪ ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಹರಿಹರದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಗೌಪ್ಯ ಸಭೆ ನಡೆಸಿದರು.
ಗವಿಸಿದ್ದಪ್ಪ ನಾಯಕ ಕೊಲೆ ಖಂಡಿಸಿ ಆ. 11ರಂದು ಸೋಮವಾರ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ನೇತೃತ್ವದಲ್ಲಿ ನಡೆಯುವ ಬೃಹತ್ ಪ್ರತಿಭಟನೆ ಕುರಿತು ಮಾಹಿತಿ ಪಡೆದರು.
ಪ್ರಕರಣದ ಕುರಿತು ಚರ್ಚಿಸಿದರು. ಅಲ್ಲದೇ ಜಿಲ್ಲಾ ಉಸ್ತುವಾರಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿಗೆ ಕರೆ ಮಾಡಿ, ಕೊಲೆ ಪ್ರಕರಣದ ಕುರಿತು ಮಾತನಾಡಿದರು. ಕುಟುಂಬಕ್ಕೆ ಸೂಕ್ತ ಪರಿಹಾರ, ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸುವುದಾಗಿ ಸಚಿವರು ಭರವಸೆ ನೀಡಿದರು. ಹೋರಾಟದ ರೂಪರೇಷಗಳ ಕುರಿತು ಚರ್ಚಿಸಿದರು. ಕುಟುಂಬಕ್ಕೆ ಸಮಾಜದ ಮುಖಂಡರು ಬೆನ್ನೆಲುಬಾಗಿ ನಿಲ್ಲುವಂತೆ ಸಲಹೆ ನೀಡಿದರು.