Post Views: 38
KOPPAL NEWS : 187ನೇ ದಿನದ ಹೋರಾಟಕ್ಕೆ ರಾಜ್ಯ ರೈತ ಸಂಘ ಬೆಂಬಲ; ಜನರ ಆರೋಗ್ಯಕ್ಕಿಂತ ದೊಡ್ಡದೇನೂ ಇಲ್ಲ: ಶಾಸಕ ದರ್ಶನ್ ಪುಟ್ಟಣಯ್ಯ

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕೊಪ್ಪಳ, ಏ. 05 : ಬಲ್ಡೋಟ ತೊಲಗಿಸುವಂತೆ ಆಗ್ರಹಿಸಿ ನಡೆಯುತ್ತಿರುವ 187ನೇ ದಿನದ ಹೋರಾಟಕ್ಕೆ ರಾಜ್ಯ ರೈತ ಸಂಘ ಬೆಂಬಲ ವ್ಯಕ್ತಪಡಿಸಿದೆ.
ಹೋರಾಟದ ವೇದಿಕೆಗೆ ಭೇಟಿ ನೀಡಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಮಾತನಾಡಿ, ಹಿರೇಬಗನಾಳ ಗ್ರಾಮಕ್ಕೆ ಭೇಟಿ ನೀಡಿ ಜನರ ಸಂಕಷ್ಟ ಕೇಳಿದಾಗ ಮನಸ್ಸು ಕಲುಕಿಕೊಂಡಿತು ಎಂದು ಹೇಳಿದರು. “ಜೀವನದ ಅಂತ್ಯಕಾಲ ಬಂದಿದೆ ಎಂದು ಮಹಿಳೆಯರು ಕಣ್ಣೀರು ಹಾಕಿದಾಗ ನನಗೂ ಕಣ್ಣೀರು ಬಂದಿತು” ಎಂದು ಮನನೊಂದು ಹೇಳಿದರು.
ಇಲ್ಲಿನ ಮಾಲಿನ್ಯಕಾರಿ ಕಾರ್ಖಾನೆಗಳು ಸಮಗ್ರ ಅಭಿವೃದ್ಧಿಗೆ ವಿರುದ್ಧವಾಗಿದ್ದು, ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇಷ್ಟೊಂದು ಸಮಸ್ಯೆಗಳು ಇದ್ದರೂ ಅಧಿಕಾರಿಗಳು ಮತ್ತು ಕೆಲ ರಾಜಕಾರಣಿಗಳು ಜನರ ಬಗ್ಗೆ ಅನುಕಂಪ ತೋರಿಸದೆ ನಿರ್ಲಕ್ಷ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಸಾಪುರ ಕೆರೆ 44.35 ಎಕರೆ ವಿಸ್ತೀರ್ಣ ಹೊಂದಿದ್ದರೂ ‘ಇದು ಕೆರೆಯೇ ಅಲ್ಲ’ ಎಂಬ ಕಥೆ ಕಟ್ಟಿದ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪರಿಸರ ಇಲಾಖೆ ಅಧ್ಯಕ್ಷ ಎಂ.ಪಿ. ನರೇಂದ್ರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಹಿರೇಬಗನಾಳ ಸುತ್ತಮುತ್ತ ಯಾವುದೇ ಮಾಲಿನ್ಯಕಾರಿ ಕೈಗಾರಿಕೆಗಳನ್ನು ನಡೆಸಲು ಅವಕಾಶ ನೀಡಬಾರದು ಎಂದು ತಾಕೀತು ಮಾಡಿರುವುದಾಗಿ ತಿಳಿಸಿದರು. “ಜನರ ಜೀವ ಮತ್ತು ಆರೋಗ್ಯಕ್ಕಿಂತ ದೊಡ್ಡದೇನೂ ಇಲ್ಲ” ಎಂದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ಕೆಲವು ರಾಜಕಾರಣಿಗಳು ಕಾರ್ಖಾನೆ ಉಳಿಸಿ ಹಳ್ಳಿಗಳನ್ನು ಸ್ಥಳಾಂತರಿಸುವ ಮಾತು ಹೇಳುತ್ತಾರೆ. ಮೊದಲು ಅವರು ತಮ್ಮ ಮನೆ ಬಿಟ್ಟು ಹೋಗಿ ನೋಡಲಿ. ಮೂಲ ನಿವಾಸ ತೊರೆಯುವುದು ಸುಲಭವಲ್ಲ” ಎಂದು ಹೇಳಿದರು. ಈ ಹೋರಾಟ ಮತ್ತೊಂದು ದೇವನಹಳ್ಳಿ ಹೋರಾಟದಂತೆ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಮುಖಂಡರಾದ ಚಾಮರಸ ಮಾಲಿ ಪಾಟೀಲ, ಮಲ್ಲಿಕಾರ್ಜುನ ಸತ್ಯಂಪೇಟೆ, ಎಂ.ಎಲ್.ಕೆ ನಾಯ್ಡು ಅವರು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಧರಣಿಯಲ್ಲಿ ಪ್ರಧಾನ ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.