BREAKING : ಕುಕನೂರು |ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ!!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಜೂನ್ 23 : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಇಟಗಿ ಗ್ರಾಮದಲ್ಲಿ ಇಂದು ಸಂಭವಿಸಿದ ಭೀಕರ ದುರಂತವೊಂದರಲ್ಲಿ, ಹೈ ವೋಲ್ಟೇಜ್ ವಿದ್ಯುತ್ ತಂತಿ ತಗುಲಿ ವ್ಯಕಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಇಟಗಿ ಗ್ರಾಮದ ನಿವಾಸಿ ನಾಗರಾಜ ತಂದೆ ಚನ್ನಪ್ಪ ಚಕ್ರಸಾಲಿ (36 ವರ್ಷ) ಎಂದು ಗುರುತಿಸಲಾಗಿದೆ. ಮೃತ ನಾಗರಾಜ ಅವರು ಕೂಲಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ಪತ್ನಿ ನಾಗರತ್ನ ಹಾಗೂ ಇಬ್ಬರು ಮಕ್ಕಳಿದ್ದಾರೆ.
ಘಟನೆಯ ವಿವರ..!
ಇಂದು ಮುಂಜಾನೆ ಸುಮಾರು 11:00 ಗಂಟೆಯ ವೇಳೆಗೆ ನಾಗರಾಜ ಅವರು ಕನಕರಾಜ ಭೋವಿ ಎಂಬುವರ ಮನೆಯ ಗೋಡೆಗೆ ಹಚ್ಚಿಟ್ಟಿದ್ದ ಕಬ್ಬಿಣದ ಏಣಿಯನ್ನು ಬಸವರಾಜ್ ಅಡಿವೆಪ್ಪನವರ್ ಎಂಬುವರ ಜಾಗದಲ್ಲಿನ ಶೆಡ್ನ ಮೇಲ್ಭಾಗದಲ್ಲಿ ಪೈಪ್ ಕಟ್ಟಲು ತೆಗೆದುಕೊಳ್ಳುತ್ತಿದ್ದರು.
ಈ ಸಂದರ್ಭದಲ್ಲಿ ದುರದೃಷ್ಟವಶಾತ್ ಕಬ್ಬಿಣದ ಏಣಿಯು ಮೇಲ್ಭಾಗದಲ್ಲಿ ಹಾದುಹೋಗಿದ್ದ 11 KV ಹೈ ವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿದೆ. ಪರಿಣಾಮವಾಗಿ ತೀವ್ರ ವಿದ್ಯುತ್ ಸ್ಪರ್ಶ ಉಂಟಾಗಿ ನಾಗರಾಜ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ತಿಳಿಯುತ್ತಿದ್ದಂತೆ ಮೃತರ ಸಹೋದರ ಶರಣಪ್ಪ ಚಕ್ಕಸಾಲಿ ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ, ನಾಗರಾಜ ಅವರ ಮೃತದೇಹವನ್ನು ಖಾಸಗಿ ವಾಹನದ ಮೂಲಕ ಕುಕನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ : ಸಾರ್ವಜನಿಕರ ಆರೋಪ!
ಈ ಅಪಾಯಕಾರಿ ಹೈ ವೋಲ್ಟೇಜ್ ವಿದ್ಯುತ್ ತಂತಿ (11 KV) ಮಾರ್ಗವನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತ್ ಕಾರ್ಯಾಲಯದಿಂದ ಕೆಇಬಿ (KEB) ಇಲಾಖೆಯ ಇಟಗಿ ಸೆಕ್ಷನ್ ಆಫೀಸರ್ ಹಾಗೂ ಕುಕನೂರಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ (ಕಾರ್ಯ & ಪಾಲನಾ ಉಪವಿಭಾಗ) ಹಲವು ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ಅರ್ಜಿ ಸಲ್ಲಿಸಲಾಗಿತ್ತು.
ಆದಾಗ್ಯೂ ಇಲಾಖೆಯು ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸದೆ ಬೇಜವಾಬ್ದಾರಿತನ ಪ್ರದರ್ಶಿಸಿದೆ ಎಂದು ಆರೋಪಿಸಲಾಗಿದೆ.
ಈ ಸಾವು ಹೆಸ್ಕಾಂ/ಕೆಇಬಿ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯದಿಂದಲೇ ಸಂಭವಿಸಿದೆ ಎಂದು ಮೃತರ ಸಹೋದರ ಶರಣಪ್ಪ ಚಕ್ರಸಾಲಿ ಎಂಬ ಕುಕನೂರು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದು,
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ. ಕುಕನೂರು ಪೊಲೀಸ್ ಠಾಣೆಯಲ್ಲಿ 72 / 2026, 106 BNS, ಕಾಯ್ದೆ ನಿರ್ಲಕ್ಷತನದ ಸಾವು ಎಂಬ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
“ಇಲಾಖೆಯ ಗಮನಕ್ಕೆ ತರದೆ ಹೈ-ಟೆನ್ಷನ್ ಲೈನ್ಗಳ ಬಳಿ ಸಾರ್ವಜನಿಕರು ತಾವೇ ಸ್ವತಃ ವೈಯಕ್ತಿಕ ಕೆಲಸಕ್ಕೆ ಮುಂದಾದಾಗ ಈ ದುರದೃಷ್ಟಕರ ವಿದ್ಯುತ್ ಅಪಘಾತ ಸಂಭವಿಸಿದ್ದು, ಇಂತಹ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುವ ಮುನ್ನ ವಿದ್ಯುತ್ ಸ್ಥಗಿತಗೊಳಿಸಲು ಇಲಾಖೆಯನ್ನು ಸಂಪರ್ಕಿಸುವುದು ಕಡ್ಡಾಯವಾಗಿದೆ. ಪ್ರಸ್ತುತ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸರ್ಕಾರದ ವಿದ್ಯುತ್ ಪರಿವೀಕ್ಷಕರ ತನಿಖಾ ವರದಿಯ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಂಡು, ಇಲಾಖೆಯ ನಿಯಮಾವಳಿಗಳಂತೆ ಮೃತರ ಕುಟುಂಬಕ್ಕೆ ಕಾನೂನುಬದ್ಧ ಪರಿಹಾರ ಒದಗಿಸಲು ವರದಿ ಸಲ್ಲಿಸಲಾಗುವುದು”
ನಾಗರಾಜ,
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಕಾರ್ಯ & ಪಾಲನಾ ಉಪವಿಭಾಗ-ಜೇಸ್ಕಾಂ, ಕುಕನೂರು.