LOCAL NEWS : ಪೌರಕಾರ್ಮಿಕರು ಆರೋಗ್ಯದ ಕಡೆ ಹೆಚ್ಚಿನ ಗಮನ ವಹಿಸಲಿ: ಮುಖ್ಯಾಧಿಕಾರಿ ನಾಗೇಶ್
ಕುಕನೂರು, ಜೂನ್ 24 : ಪೌರಕಾರ್ಮಿಕರು ಸಮಾಜದ ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದು, ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಬುಧವಾರದಂದು ಪೌರಕಾರ್ಮಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಆರೋಗ್ಯ ತಪಾಸಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
”ಪೌರಕಾರ್ಮಿಕರು ಸಮಾಜದ ಸ್ವಚ್ಛತೆಯ ನಿಜವಾದ ಶ್ರಮಿಕರು. ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ನೀವು ನಿಮ್ಮ ಸ್ವಂತ ಆರೋಗ್ಯವನ್ನೇ ತ್ಯಾಗ ಮಾಡುತ್ತಿದ್ದೀರಿ. ಹಾಗಾಗಿ, ನಿಮ್ಮ ಆರೋಗ್ಯವನ್ನು ರಕ್ಷಿಸುವ ಸಂಪೂರ್ಣ ಹೊಣೆಗಾರಿಕೆ ಸರ್ಕಾರದ ಮೇಲಿದೆ,” ಎಂದು ನಾಗೇಶ್ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ತಂಬಾಕು ಮುಕ್ತ ಸಮಾಜಕ್ಕೆ ಕರೆ..!
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಂತ ವೈದ್ಯಾಧಿಕಾರಿ ಸುಷ್ಮಾ ಜಿ. ಅವರು ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಪೌರಕಾರ್ಮಿಕರು ಗುಟಕಾ, ಸಿಗರೇಟಿನಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿ. ತಂಬಾಕು ಸೇವನೆಯಿಂದ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳು ಆವರಿಸಿಕೊಳ್ಳುತ್ತವೆ,” ಎಂದು ಎಚ್ಚರಿಸಿದರು.
ಮುಂದುವರಿದು ಮಾತನಾಡಿದ ಅವರು, ತಂಬಾಕಿನಿಂದ ಆರೋಗ್ಯಕ್ಕಾಗುವ ಹಾನಿ ಹಾಗೂ ಅದರ ಅಪಾಯಗಳ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಒಂದು ಆರೋಗ್ಯವಂತ ಹಾಗೂ ತಂಬಾಕು ಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬ ನಾಗರಿಕರ ಸಹಕಾರ ಅತ್ಯಂತ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾ ನಾಗರಡ್ಡಿ, ಮಂಜುನಾಥ ಹಿರೇಮನಿ, ಕಾಳಪ್ಪ ಕುಂಬಾರ್, ಕಳಕಪ್ಪ ಬಂಡಿ, ಕೃಷ್ಣರಾವ್ ದೇಶಪಾಂಡೆ, ರಮ್ಯ ತೊಂಡಿಹಾಳ, ಯಲ್ಲಪ್ಪ ಕಲ್ಮನಿ, ಮಹಾಂತೇಶ್ ಮುಧೋಳ್ ಹಾಗೂ ಬಸವರಾಜ್ ಆರಬೆರಳಿನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.