ಬೆಂಗಳೂರು: ಅತಿಥಿ ಉಪನ್ಯಾಸಕರ ಹುದ್ದೆಗೆ ಯಾವುದೇ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೊದಲು ಯುಜಿಸಿ ನಿಯಮಾವಳಿ 2018 ರ ಅಡಿಯಲ್ಲಿ “ವಿಶ್ವವಿದ್ಯಾಲಯ ಧನಸಹಾಯ ಆಯೋಗ” (ಯುಜಿಸಿ) ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಮತ್ತು ಸಂಪೂರ್ಣವಾಗಿ ಪಾಲಿಸುವಂತೆ ಹೈಕೋರ್ಟ್ ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.
ಅರ್ಜಿದಾರರ ಎಚ್.ಸಂಜೀವಯ್ಯ ಮತ್ತು ಇತರ ಮೂರು ಜನ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ ನ್ಯಾಯಮೂರ್ತಿ ಆರ್.ನಟರಾಜ್ ಈ ಮಹತ್ವದ ನಿರ್ದೇಶನದ ಆದೇಶ ನೀಡಿದ್ದಾರೆ. ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆಎಸ್ಇಟಿ) ಅಥವಾ ರಾಜ್ಯ ಅರ್ಹತಾ ಪರೀಕ್ಷೆ (ಎಸ್ಇಟಿ) ಅಥವಾ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ)ಅಥವಾ ಪಿಎಚ್ಡಿ ಪರೀಕ್ಷೆಗಳನ್ನು ಒತ್ತಾಯಿಸದೆ, ಸ್ನಾತಕೋತ್ತರ ಪದವೀಧರರನ್ನು ಮಾತ್ರ ಪರಿಗಣಿಸುವ ಆಗಸ್ಟ್ 24, 2024 ರ ಅಧಿಸೂಚನೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಯಮಗಳು, 2018 ಮತ್ತು ಯುಸಿಜಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮೊದಲ ಸುತ್ತಿನ ಕೌನ್ಸೆಲಿಂಗ್ ಅನ್ನು ಕಟ್ಟುನಿಟ್ಟಾಗಿ ಮರುಹೊಂದಿಸಲು ಹಾಗೂ ಬಳಿಕ ನೇಮಕಾತಿಗಳನ್ನು ಮಾಡಲು ಅರ್ಜಿದಾರರು ನಿರ್ದೇಶಿಸಿದ್ದಾರೆ. ಯುಜಿಸಿ ನಿಯಮಗಳು ಮತ್ತು 2024-25ರ ಶೈಕ್ಷಣಿಕ ವರ್ಷ ಮತ್ತು ನಂತರದ ಶೈಕ್ಷಣಿಕ ವರ್ಷಗಳ ಮಾರ್ಗಸೂಚಿಗಳ ಪ್ರಕಾರ ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲು ನಿರ್ದೇಶನ ನೀಡುವಂತೆ ಅವರು ಕೋರಿದ್ದಾರೆ.
ಈ ವಿಚಾರಣೆ ನಡೆಸಿದ ಹೈಕೋರ್ಟ್ ಯುಜಿಸಿ ಅನುಸಾರ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರದ ಯಾವುದೇ ಅಭ್ಯರ್ಥಿಯನ್ನು ಇಲಾಖೆಗಳು ಆಯ್ಕೆ ಮಾಡದಂತೆ ನಿರ್ದೆಶನದ ಆದೇಶ ನೀಡಿದೆ.